ಯಕ್ಷದೇಗುಲ-2014 ಪ್ರಶಸ್ತಿಗೆ ಪೇತ್ರಿ ಮಾಧವ ನಾಯ್ಕರು ಆಯ್ಕೆ
ಲೇಖಕರು : ಕೋಟ ಸುದರ್ಶನ ಉರಾಳ
ಮ೦ಗಳವಾರ, ಮಾರ್ಚ್ 10 , 2015
|
ಕಳೆದ 34 ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಶ್ರೀ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ, ನಾಗರಾಜ್ ಪ್ರಶಸ್ತಿ ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ವಿಜೇತ ಬೆಂಗಳೂರಿನ ಯಕ್ಷದೇಗುಲ ತಂಡದ “ಯಕ್ಷದೇಗುಲ ಸನ್ಮಾನ-2014 ರ ಸನ್ಮಾನಕ್ಕೆ ಅಭಿಜಾತ ಯಕ್ಷಗಾನ ಕಲಾವಿದ ಪೇತ್ರಿ ಮಾಧವ ನಾಯ್ಕರು ಆಯ್ಕೆ ಆಗಿದ್ದಾರೆ.
ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಇದೇ ಮಾರ್ಚ್ 28,29,30 ರಂದು ಡಾನ್ ಬಾಸ್ಕೋ ಹಾಲ್ನಲ್ಲಿ ಯಕ್ಷಗಾನ ಉತ್ಸವ ನಡೆಸಲಿದ್ದು, 28-03-2015 ರಂದು ಪೇತ್ರಿ ಮಾಧವ ನಾಯ್ಕರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. ಕಳೆದ 34 ವರ್ಷದಿಂದ ಕೆ. ಮೋಹನ್ ನಿರ್ದೇಶನದೊಂದಿಗೆ ಬಾಲಕೃಷ್ಣ ಭಟ್ರ ಅಧ್ಯಕ್ಷತೆಯಲ್ಲಿ ಯಕ್ಷದೇಗುಲತಂಡವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದವರ ಸಹಕಾರದೊಂದಿಗೆ ಯಕ್ಷಗಾನ ಉತ್ಸವ ನಡೆಸಲಿದ್ದಾರೆ.
ಪೇತ್ರಿ ಮಾಧವ ನಾಯ್ಕರ ಪರಿಚಯ
ಯಕ್ಷಗಾನ ಕಲಾವಾರಿಧಿಯಲ್ಲಿ ಅನರ್ಘ್ಯ ರತ್ನವಾಗಿ ಕಂಗೊಳಿಸಿ, ಯಕ್ಷಪ್ರಿಯರ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದೇ ಉಳಿದ ಅಪೂರ್ವ ಕಲಾ ಸಾಧಕ, ಸಮರ್ಪಣಾ ಭಾವದ ಸ್ನೇಹ ಜೀವಿ, ಪೇತ್ರಿ ಮಾಧವ ನಾಯ್ಕರು. 1940ರಲ್ಲಿ ವಾಮನ ನಾಯ್ಕ ಮತ್ತು ಮೈರು ದಂಪತಿಗಳ ಸುಪುತ್ರರಾಗಿ ಜನ್ಮ ತಳೆದವರು. ಬಡತನದ ಬೀಸುಗಾಳಿಯ ಹೊಡೆತಕ್ಕೆ ನಲುಗಿದರೂ, ಕಲಾ ಸಂಪನ್ನತೆಯ ತಂಪು ಮಾರುತದ ಸೆಳೆತಕ್ಕೆ ಒಳಗಾಗಿ ಕಲಾ ಮಾತೆಯ ಸೇವೆಗೆ ನಿಂತವರು. ತನ್ನ ಹದಿನಾಲ್ಕನೆ ವಯಸ್ಸಿಯನಲ್ಲಿಯೇ ಆ ಕಾಲದ ಪ್ರಖ್ಯಾತ ಮದ್ದಲೆಗಾರ ಮಾವ, ತಿಮ್ಮಪ್ಪ ನಾಯ್ಕರಿಂದ ಕಲಾದೀಕ್ಷೆಯನ್ನು ಪಡೆದು ಸುದೀರ್ಘವಾದ ಸಾರ್ಥಕ ಕಲಾಯಾತ್ರೆಯನ್ನು ಪೂರೈಸಿ, ಕಲಾರಾಧಕರ ಕಣ್ಮಣಿ ಎನಿಸಿಕೊಂಡವರು.
ಯಕ್ಷ ದಿಗ್ಗಜರ ಒಡನಾಟದ ಬೆಳಕಿನಲ್ಲಿ ಬಹುವಿಧದ ಯಕ್ಷವೇಷಧಾರಿಯಾಗಿ ಜನಮನ ರಂಜಿಸಿದ ಮಾಧು ನಾಯ್ಕರು ಸಾಹಿತ್ಯ-ಕಲಾ ವಲಯದ ವಿಸ್ಮಯ ಡಾ|.ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿ ಅವರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರಾಗಿ ಮುಖ್ಯ ವೇಷಗಳನ್ನು ನಿರ್ವಹಿಸಿ ಯಕ್ಷಕಲೆಯ ಪ್ರಸಾರಕ್ಕಾಗಿ ಅವಿರತ ಶ್ರಮಿಸಿದವರು. ಅರ್ಧ ಶತಮಾನಕ್ಕಿಂತಲೂ ಹೆಚ್ಚು (53 ವರ್ಷಗಳು) ಕಾಲ ಸೇವೆ ಸಲ್ಲಿಸಿದ ಶ್ರೀಯುತರು ಹಿಡಿಂಬಾ, ಘಟೋತ್ಕಜ, ಶೂರ್ಪನಖಾ ಮುಂತಾದ ಬಣ್ಣದ ವೇಷಗಳಿಗೆ ಅಪೂರ್ವವಾಗಿ ಜೀವ ತುಂಬಿರುವುದಲ್ಲದೇ ಅನೇಕ ಪುರುಷ ಪಾತ್ರಗಳಲ್ಲಿಯೂ ಮಿಂಚಿದವರು.
ನಡು ಬಡಗಿನ ಲಾಲಿತ್ಯ ಪೂರ್ಣ ಕುಣಿತದ ಮೂಲಕ ತನ್ನದೇ ವಿಶಿಷ್ಟ ಛಾಪು ಮೂಡಿಸಿದ ಶ್ರೀಯುತರು ಇಪ್ಪತ್ತಮೂರು ವರ್ಷಗಳ ಕಾಲ ವ್ಯವಸಾಯಿ ಮೇಳಗಳಲ್ಲಿದ್ದು, ಮೂವತ್ತು ವರ್ಷಗಳ ಕಾಲ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಮೇರಿಕಾ, ಕೆನಡಾ, ಜರ್ಮನ್, ಹಾಂಕಾಂಗ್, ಜಪಾನ್, ಇಟಲಿ, ಯುಗೋಸ್ಲಾವಿಯಾ, ಬಲ್ಗೇರಿಯಾ, ಲಂಡನ್, ಮಾಸ್ಕೊ, ಹಂಗೇರಿ, ಕಿರ್ಗಿಸ್ಥಾನ್, ರಷ್ಯಾ, ಅಬುದಾಯಿ, ದುಬೈ, ದಕ್ಷಿಣ ಅಮೇರಿಕಾ, ಪೆರು, ಬ್ರೆಜಿಲ್, ಸ್ಕಾಟ್ಲ್ಯಾಂಡ್, ಸ್ವೀಡನ್ ರಾಷ್ಟ್ರಗಳನ್ನು ಸಂದರ್ಶಿಸಿ ಯಕ್ಷ ದುಂಧೂಬಿ ಮೊಳಗಿಸಿದವರು.
ದಿ|. ಹಾಲಾಡಿ ರಾಮ ಗಾಣಿಗ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಬಿ.ವಿ. ಆಚಾರ್ಯ ಪ್ರಶಸ್ತಿ, ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ಡಾ|. ಕಾರಂತ ಬಾಲವನ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಯ ಗರಿಗಳನ್ನು ಮುಡಿಗೇರಿಸಿಕೊಂಡ ಶ್ರೀಯುತರನ್ನು ಹತ್ತು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಸತ್ಕರಿಸಿವೆ. ನಾಡಿನ ಶ್ರೀಮಂತ ಕಲೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಿ ಅನುಪಮ ಸಾಧಕರೆನಿಸಿಕೊಂಡಿರುವ ಪೇತ್ರಿ ಮಾಧು ನಾಯ್ಕರು.
|
|
|